ಬೆಂಗಳೂರು: ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣ ಮಾಡಿದಾಗ 1562 ಕೆರೆ ಕುಂಟೆಗಳಿದ್ದವು ಇಂದು ಭೂ ಮಾಫಿಯಾ ಒತ್ತುವರಿಯಿಂದ ಕೆರೆಕುಂಟೆಗಳು ಕಾಣೆಯಾಗಿವೆ ಎಂದು ಭಾರತೀಯ ವಿಜ್ಞಾನ ಮಂದಿರದ ಸಂಶೋಧಕ ಡಾ.ಟಿವಿ ರಾಮಚಂದ್ರ ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ನೆಲ ಜಲ ಸಂರಕ್ಷಣಾ ಸಮಿತಿ ಹಾಗೂ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಕುಡಿಯುವ ನೀರಿನ ಸಮಸ್ಯೆ ಕುರಿತ ವಿಚಾರ ಮಂಥನ ಕಾರ್ಯಕ್ರಮವನ್ನು ಒಣಗಿ, ಸೂರಗಿ ಹೋಗಿರುವ ಗಿಡಕ್ಕೆ ಹನಿ ಹನಿ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದು ಬೆಂಗಳೂರಿನಲ್ಲಿ 193 ಕೆರೆಗಳು ಮಾತ್ರ ಉಳಿದಿವೆ. ಆಡಳಿತ ಮಾಡುವ ಅಧಿಕಾರಸ್ತರು ಆಯ್ಕೆ ಮಾಡಿದ ಜನರ ನೀರು ಪರಿಸರದ ಬಗ್ಗೆ ಗಂಭೀರ ಚಿಂತನೆ ನಡೆಸುತ್ತಿಲ್ಲ. ಕಣ್ಣೊರೆಸುವ ತಂತ್ರಗಾರಿಕೆ ಮಾಡುತ್ತಿದ್ದಾರೆ, ಇದರಿಂದಲೇ ವಾತಾವರಣದಲ್ಲಿ ಉಷ್ಣಾಂಶ ಏರಿಕೆಯಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಇನ್ನು ವರ್ತೂರು ಬೆಳ್ಳಂದೂರು ಕೆರೆ ಕಲ್ಮಶ ನೀರು ಸುದ್ದಿ ಆಗಲಿ, ಮಳೆ ಕೊಯ್ಲು ನೀರನ್ನ ಸದ್ಬಳಕೆ ಮಾಡಿಕೊಂಡರೆ, ಬಹುತೇಕ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮೇಕೆದಾಟು ಯೋಜನೆ ನಿರ್ಮಾಣದಿಂದ 5000 ಎಕ್ಟರ್ ಕಾಡು ಪರಿಸರ ನಾಶವಾಗಲು ಕಾರಣವಾಗುತ್ತದೆ. ಅದರ ಬದಲು ಬೆಂಗಳೂರು ನಗರದ ಅಂತರ್ಜಲ ಹೆಚ್ಚಿಸುವ ಯೋಜನೆಗಳು ಕಠಿಣ ನಿರ್ಧಾರದ ಮೂಲಕ ಜಾರಿಗೆ ತಂದು ಒತ್ತುವರಿ ಮಾಡಿರುವ ರಾಜಕಾಲುವೆ, ಕೆರೆ, ಕುಂಟಿಗಳನ್ನು ಕಾಲಿ ಮಾಡಿಸಬೇಕು. ಆಗ ನೀರಿನ ಸಮಸ್ಯೆ ಬಗೆಹರಿಯುತ್ತದೆ ಹಸಿರು ಪರಿಸರ ಹೆಚ್ಚಿಸುವ ಯೋಜನೆಗಳು ರೂಪುಗೊಳ್ಳಬೇಕು ಎಂದರು.
ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಮಾತನಾಡಿ, ಕುಡಿಯುವ ನೀರಿಗಾಗಿ ಜನ ಅಹಕಾರ ಪಡುತ್ತಿದ್ದಾರೆ ಉತ್ತರ ಕರ್ನಾಟಕದಲ್ಲಿ ಭೀಮ, ಕೃಷ್ಣಾ, ಘಟಪ್ರಭಾ, ಮಹದಾಯಿ, ಕಾವೇರಿ ನದಿಗಳಿಂದ ನೀರು ಹರಿಸುವಂತೆ ರೈತರು ಘೋರ ಆಕ್ರಂದನ ಮಾಡುತ್ತಿದ್ದಾರೆ ಎಂದರು.
ಇನ್ನು ಬೆಂಗಳೂರಿನಲ್ಲಿ ವಾರಕ್ಕೊಮ್ಮೆ ನೀರು ಸಿಗುವಂತಾಗಿದೆ. ಇಂಥ ಸ್ಥಿತಿಯಲ್ಲಿ ಮೇಕೆದಾಟು ಕುಡಿಯೋ ನೀರಿನ ಯೋಜನೆಯನ್ನು ಸ್ಥಗಿತಗೊಳಿಸುವ ಡಿಎಂಕೆ ಚುನಾವಣಾ ಪ್ರಣಾಳಿಕೆ ಏಕೆ ಬೇಕು? ಕುಡಿಯೋ ನೀರಿನ ವಿವಾದ ಕೆಣಕಿ ಜನರನ್ನ ರೂಚ್ಚಿಗೆಳಿಸುವ ರಾಜಕೀಯ ಪಕ್ಷಕ್ಕೆ ಚುನಾವಣಾ ಆಯೋಗ ಕಠಿಣ ಕ್ರಮ ಕೈಗೊಳ್ಳಲಿ. ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ಕ್ರಮ ಕೈಗೊಳ್ಳುವಂತೆ ದೂರು ಸಲ್ಲಿಸಬೇಕು ಎಂದರು.
ನೀರಿನ ಸಂಕಷ್ಟ ಕಾಲದಲ್ಲಿ ರೈತರು ಕೂಡ ಬೆಳೆ ಪದ್ಧತಿ ಬದಲಾಯಿಸಿಕೊಳ್ಳಬೇಕು. ವೇಸ್ಟ್ ವಾಟರ್ ಪುನರ್ ಬಳಕೆ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು. ಕಳೆದ ಆರು ತಿಂಗಳ ಹಿಂದೆ ಕಾವೇರಿ ಹೋರಾಟ ಮಾಡಿದಾಗ ಕಾವೇರಿ ನೀರು ತಮಿಳುನಾಡಿಗೆ ಹರಿಸದಂತೆ ಸರ್ಕಾರದ ಗಮನ ಸೆಳೆದರು ಪ್ರಯೋಜನವಾಗಲಿಲ್ಲ.
ಇನ್ನು ಮತ್ತೊಂದು ಕಡೆ ಬೆಂಗಳೂರು ನಗರದಲ್ಲಿರುವ ಕೆರೆ ಕಟ್ಟೆಗಳನ್ನು ಮುಚ್ಚಿ ಭೂ ಮಾಫಿಯಾದವರು ದೊಡ್ಡ ಕಟ್ಟಡಗಳ ನಿರ್ಮಾಣ ಮಾಡಿದ ಕಾರಣವೂ ಸಮಸ್ಯೆಯ ಮೂಲವಾಗಿದೆ. ಇಂಥವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತಾಗಬೇಕು. ರಾಜ್ಯ ಸರ್ಕಾರದ ವೈಫಲ್ಯದಿಂದ ನಾವು ಸಂಕಷ್ಟ ಪಡುವಂತಾಗಿದೆ ಎಂದು ಕುರುಬೂರು ಶಾಂತಕುಮಾರ್ ಹೇಳಿದರು.
ನೀರು ಮರುಬಳಕೆ ಬಗ್ಗೆ ಮಾತನಾಡಿದ ದಾಕ್ಷಾಯಿಣಿ ಅವರು, ಬೆಂಗಳೂರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕಾಲ್ ಸೆಂಟರ್ ಫಾರ್ ವಾಟರ್ 9551261154 ಆರಂಭಿಸಲಾಯಿತು, ಯಾರು ಬೇಕಾದರೂ ಸಂಪರ್ಕಿಸಿ ನೀರಿನ ಉಪಯುಕ್ತ ಬಳಕೆಯ ಬಗ್ಗೆ ಮರು ಸಂಸ್ಕರಣೆ ಬಗ್ಗೆ ಅರಿವು ಮೂಡಿಸುತ್ತೇವೆ. ಇದರಿಂದ ಶೇಕಡ ಅರ್ಧ ಭಾಗದಷ್ಟು ನೀರು ಉಳಿಸಬಹುದು. ಶಿಕ್ಷಣ ಸಂಸ್ಥೆಗಳು ಅಪಾರ್ಟ್ಮೆಂಟ್ಗಳು, ಕಟ್ಟಡಗಳು ನಿರ್ಮಾಣ ಮಾಡವಾಗ, ಸಂಸ್ಕರಿಸಿದ ನೀರು ಬಳಕೆಯಿಂದ ಕುಡಿಯುವ ನೀರಿನ ಸಮಸ್ಯೆ ಕಡಿಮೆ ಮಾಡಬಹುದು ಎಂದರು.
ಹಿರಿಯ ನಟ ಮುಖ್ಯಮಂತ್ರಿ ಚಂದ್ರು ಮಾತನಾಡಿ, ಸಂಸ್ಕರಿಸಿದ ನೀರಿನ ಪುನರ್ ಬಳಕೆ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಮರು ಬಳಕೆ ನೀರನ್ನು ಹೆಚ್ಚು ಜನರು ಉಪಯೋಗಿಸುತ್ತಿಲ್ಲ. ನೀರಿನ ಭೀಕರತೆ ಪರಿಣಾಮ ಬೆಂಗಳೂರು ನಗರದ ಜನ ವಲಸೆ ಹೋಗಬೇಕಾಗುತ್ತದೆ. ಇದನ್ನು ಅರಿತು ನೀರು ಸರಬರಾಜು ಮಂಡಳಿಯವರು ಸಮರೋಪಾದಿಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.
ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್ ಮಾತನಾಡಿ, ಬೆಂಗಳೂರು ನಗರದಲ್ಲಿ ಇರುವ 30 ಸಾವಿರ ಹೋಟೆಲ್ಗಳಲ್ಲಿ 50 ಲಕ್ಷ ಜನರಿಗೆ ದಿನನಿತ್ಯ ಕುಡಿಯುವ ನೀರು ಉಚಿತವಾಗಿ ಕೊಡುತ್ತೇವೆ. ನಾವು ಈಗಾಗಲೇ ಕನಿಷ್ಠ 20 ಲೀಟರ್ ಉಳಿತಾಯ ಮಾಡುವ ಯೋಜನೆಯನ್ನು ಜಾರಿ ಮಾಡಿದ್ದೇವೆ. ಇದರಿಂದ 50 ಲಕ್ಷ ಲೀಟರ್ ನಷ್ಟು ನೀರು ಉಳಿಸುತಿದ್ದೇವೆ. ಅಧಿಕಾರದಲ್ಲಿರುವ ಜನ ವಿಧಾನಸೌಧದಲ್ಲಿ ನೀರು ಉಳಿಸುವ ಯೋಜನೆ ಜಾರಿಗೆ ತರಬೇಕು ಎಂದರು.
ಅಧ್ಯಕ್ಷತೆ ವಹಿಸಿದ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಅಧ್ಯಕ್ಷ ಡಾ.ವೂಡೆ ಪಿ. ಕೃಷ್ಣ ಮಾತನಾಡಿ, ಕಾವೇರಿ ನೀರಿನ ಸಮಸ್ಯೆ ಬೆಂಗಳೂರು ಕುಡಿಯುವ ನೀರಿನ ಸಮಸ್ಯೆಗೆ ಮೂಲವೆಂಬುದು ಬಹುತೇಕ ಜನರಿಗೆ ಗೊತ್ತೇ ಇಲ್ಲ. ನೀರು ಬಳಕೆಯ ಬಗ್ಗೆ ಶಿಕ್ಷಣ ಸಂಸ್ಥೆಗಳಲ್ಲಿ ಮಕ್ಕಳಿಗೂ ಅರಿವು ಮೂಡಿಸುವ ಕಾರ್ಯವಾಗಬೇಕು, ಇಂದು ಈ ವಿಚಾರ ಮಂಥನ ನಮಗೆ ಬಹಳಷ್ಟು ಮಾಹಿತಿ ಜ್ಞಾನವನ್ನು ದೊರಕಿಸಿಕೊಟ್ಟ ಕಾರ್ಯಕ್ರಮವಾಗಿದೆ. ಕರ್ನಾಟಕ ನೆಲ ಜಲ ಸಂರಕ್ಷಣ ಸಮಿತಿ ಕಾರ್ಯ ಮೆಚ್ಚುವಂತದ್ದು ಎಂದು ಪ್ರಶಂಸಿದರು.
ಆರಂಭದಲ್ಲಿ ಡಾ ವಿ ಪಿ ನಿರಂಜನಾ ಆರಾಧ್ಯ ಎಲ್ಲರನ್ನು ಸ್ವಾಗತಿಸಿದರು. ಕನ್ನಡ ಚಳವಳಿ ಮುಖಂಡ ಗುರುದೇವ್ ನಾರಾಯಣ ಕುಮಾರ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದರು, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಡಾಕ್ಟರ್ ಶಿವಣ್ಣ ವಂದನಾರ್ಪಣೆ ಮಾಡಿದರು.