ಬೆಂಗಳೂರು: ರಾಷ್ಟ್ರೀಯ ಸಂಘರ್ಷ ಸಮಿತಿ ಹಾಗೂ ಬಿಎಂಟಿಸಿ & ಕೆಎಸ್ಆರ್ಟಿಸಿ ವತಿಯಿಂದ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನಾ ಸಭೆ ಹಾಗೂ ಮನವಿ ಪತ್ರ ಸಲ್ಲಿಸುವ ಕಾರ್ಯಕ್ರಮವನ್ನು ಮಾರ್ಚ್ 27 ರಂದು ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಆಯೋಜಿಸಲಾಗಿದೆ.
ಸರ್ವೋಚ್ಚ ನ್ಯಾಯಾಲಯವು ಸುನಿಲ್ ಕುಮಾರ್ ಪ್ರಕರಣದಲ್ಲಿ ತೀರ್ಪು ನೀಡಿ 17 ತಿಂಗಳು ಕಳೆದಿದ್ದು, ಎಲ್ಲ ಪಿಂಚಣಿದಾರರು ಇನ್ನೂ ಕೂಡ ತ್ರಿಶಂಕು ಸ್ಥಿತಿಯಲ್ಲಿದ್ದಾರೆ. ಪಾರ್ಲಿಮೆಂಟ್ ಚುನಾವಣಾ ಸಬೂಬೂ ನೀಡಿ, ಮೇ 31ರ ಅಂತಿಮ ಗಡುವು ದಿನಾಂಕವನ್ನು ಮತ್ತೆ ಅನಿರ್ದಿಷ್ಟ ಅವಧಿಗೆ ಪಿಎಫ್ ಅಧಿಕಾರಿಗಳು ಮುಂದೂಡುವ ಸಂಭವವಿದೆ.
ಕಾಲಚಕ್ರ ಉರುಳುತ್ತಿದ್ದು, ಬದುಕಿನಕ್ಷಣ ಕುಸಿಯುತ್ತಿದೆ. ಇದರಿಂದ ನಿವೃತ್ತರು ಪರಿತಪಿಸುತ್ತಿದ್ದಾರೆ. ಇಪಿಎಫ್ಒ ಅಧಿಕಾರಿಗಳ ಕುಮ್ಮಕ್ಕಿಗೆ ಕೇಂದ್ರ ಸರ್ಕಾರವು ಕೈಜೋಡಿಸಿದ್ದು, ಸಿಬಿಟಿ ಸಭೆಯಲ್ಲಾಗಲಿ ಅಥವಾ ಪಾರ್ಲಿಮೆಂಟ್ ಅಧಿವೇಶನದಲ್ಲಾಗಲಿ ನಿವೃತ್ತರ ಬಗ್ಗೆ ಚಕಾರವೆತ್ತದೆ, ನಮ್ಮನ್ನು ಸಂಪೂರ್ಣ ನಿರ್ಲಕ್ಷಿಸಿರುವುದು ಅತ್ಯಂತ ಖಂಡನೀಯ.
ಅಧಿಕಾರಿಗಳು ದೊಡ್ಡದಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿ, ಮಾರ್ಚ್ 27 ರಂದು ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮವನ್ನು ದೇಶಾದ್ಯಂತ ಇರುವ ಎಲ್ಲ ಪಿಎಫ್ ಕಚೇರಿ ಆವರಣದಲ್ಲಿ ನಡೆಸುತ್ತಿದ್ದು, ನಿವೃತ್ತರ ಎಲ್ಲ ಕುಂದು ಕೊರತೆಗಳನ್ನು ಬಗೆಹರಿಸುತ್ತೇವೆ ಎಂದು ಪ್ರಚೂರಪಡಿಸಿದ್ದಾರೆ. ಆದರೆ ಈ ಬಾರಿ ಈ ಅಧಿಕಾರಿಗಳ ಆಟ ನಡೆಯುವುದಿಲ್ಲ.
ನಾವು ಈವರೆಗೂ ನೀಡಿರುವ ಮನವಿಗಳಿಗೆ ಈ ಅಧಿಕಾರಿಗಳು ಸ್ಪಂದಿಸಿಲ್ಲ. ಚುನಾವಣಾ ಹೊತ್ತಿನಲ್ಲಿ ನಮ್ಮ ಹೋರಾಟದ ಕಾವು ನವದೆಹಲಿ ತಲುಪಬೇಕು. ಎಲ್ಲ ಇಪಿಎಸ್ ನಿವೃತ್ತರು ಎಚ್ಚೆತ್ತುಕೊಂಡು ಈ ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ಬಿಎಂಟಿಸಿ & ಕೆಎಸ್ಆರ್ಟಿಸಿ ನಿವೃತ್ತ ನೌಕರರ ಸಂಘಟನೆಯ ಕಾರ್ಯಾಧ್ಯಕ್ಷ ನಂಜುಂಡೇಗೌಡ ಕರೆ ನೀಡಿದ್ದಾರೆ.
ಇನ್ನು ಸೆಪ್ಟೆಂಬರ್ 1, 2014 ಪೂರ್ವ ಅಥವಾ ನಂತರ ನಿವೃತ್ತರಾದವರು ನಾಣ್ಯದ ಎರಡು ಮುಖ ಇದ್ದಂತೆ, ಇದನ್ನು ಕೇಂದ್ರ ಸರ್ಕಾರ ಸರಿಯಾಗಿ ಅರ್ಥಮಾಡಿಕೊಳ್ಳಬೇಕು. ರಾಷ್ಟ್ರೀಯ ಸಂಘರ್ಷ ಸಮಿತಿ ಅಧ್ಯಕ್ಷ ಕಮಾಂಡರ್ ಅಶೋಕ್ ರಾಹುತ್ ಹಾಗೂ ಇತರೇ ಮುಖಂಡರು ನಿವೃತ್ತರ ಬದುಕಿಗಾಗಿ, ಕಳೆದ ಮೂರು ತಿಂಗಳಿನಿಂದ ದೆಹಲಿಯಲ್ಲಿ ನಡೆಸಿದ ಹೋರಾಟ ಎಂತಹವರ ಮನ ಕಲುಕುತ್ತದೆ.
ನಿವೃತ್ತರಿಗಾಗಿ ಇವರು ತಮ್ಮನ್ನು ತಾವೇ ಸಮರ್ಪಿಸಿಕೊಂಡಿದ್ದಾರೆ. ಎನ್ಎಸಿ ರಾಷ್ಟ್ರೀಯ ಮುಖ್ಯ ಸಂಯೋಜಕ ರಮಾಕಾಂತ ನರಗುಂದರವರು ಪ್ರತಿಭಟನಾಕಾರರನ್ನು ಉದ್ದೇಶಿಸಿ ಸಭೆಯಲ್ಲಿ ಮಾತನಾಡಲಿದ್ದು, ಕನಿಷ್ಠ ಪಿಂಚಣಿ ಹಾಗೂ ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ ಕೆಲವೊಂದು ಮಹತ್ವದ ಸಂಗತಿಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಇಪಿಎಸ್ ಪಿಂಚಣಿದಾರರ ಪಿತಾಮಹ ಆರ್ಸಿ ಗುಪ್ತ, ನ್ಯಾಯಾಲಯ ನಿಂದನಾ ಪ್ರಕರಣ ಏಪ್ರಿಲ್ 2 ರಂದು ಮಾನ್ಯ ಸರ್ವೋಚ್ಚ ನ್ಯಾಯಾಲಯದ ಮುಂದೆ ವಿಚಾರಣೆಗೆ ಬರಲಿದೆ. ಹೆಚ್ಚುವರಿ ಪಿಂಚಣಿಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪನ್ನು ಮೇ 31ರ ಒಳಗೆ ಅನುಷ್ಠಾನಗೊಳಿಸಬೇಕೆಂದು ಈ ಸಭೆಯಲ್ಲಿ ಆಗ್ರಹಿಸಲಾಗುವುದು.
ಇಪಿಎಸ್ ನಿವೃತ್ತರ ಈ ಎಲ್ಲ ಬೇಡಿಕೆಗಳಿಗೆ ಸಂಬಂಧಿಸಿದಂತೆ ಮಾರ್ಚ್ 27 ರಂದು ಬೆಳಗ್ಗೆ 11 ಗಂಟೆಗೆ ನಗರದ ರಿಚ್ಮಂಡ್ ವೃತ್ತದಲ್ಲಿರುವ ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ಆವರಣದಲ್ಲಿ ಜರುಗುವ ಶಾಂತಿಯುತ ಪ್ರತಿಭಟನೆ ಹಾಗೂ ಅಧಿಕಾರಿಗಳನ್ನು ಎಚ್ಚರಿಸುವ ಮನವಿ ಪತ್ರವನ್ನು ಸಲ್ಲಿಸುವ ಸಭೆಯಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದ್ದಾರೆ.